Sunday, 5 January 2014

"ಆಶಾಭಾವ"

ಭೂನೆಲದ ಒಡಲಿಂದ
ಬಂಧ ಕಳೆದಿದೆ ಹಳೆಮರ
ತನ್ನೊಡಲ ಬೇರಿಂದ
ಬೆಳೆಸಿ ಹೊಸ ಚಿಗುರ
ಮರದ ಎಲೆಮರೆ ಹಣ್ಣು
ನೆಲದೊಡಲ ಸೇರಲು
ಗರ್ಭ ಧರಿಸಿದೆ ಮಣ್ಣು
ಜೀವದುಸಿರನೆ ಹೆರಲು

ತನ್ನ ಜೀವಿತವ ಕಳೆದು
ನೆಲಕಿಳಿದ ಒಣ ಎಲೆಯು
ಕಣ್ಣಹನಿ ಮಿಡಿವುದೆ ಎಂದಾದರು
ತನ್ನ ಹಡೆದ ತಾಯ್ಮಡಿಲಲಿ ಕರಗಿ
ಬರುವ ನವ ಚಿಗುರನು
ಮರೆವುದೆ ಮುಂದಾದರು

ಮೋಡ ಕರಗಲು ಸುರಿವ
ಮಳೆಹನಿ ಬಿಕ್ಕುವುದೆ
ಮಡಿಲ ತೊರೆದೆನೆಂದು
ನೆಲಕಿಳಿದು ಹರಿಯುವುದು
ಸಂತಸದಿ ನದಿಯಾಗಿ
ಕಡಲ ಸೇರುವೆನೆಂದು

ರವಿಕಿರಣಗಳಿಗೆ ಹೊಳೆದು
ಅರಳಿ ನಗುವ ಹೂವುಗಳು
ಬಿಸಿಲೆಂದು ಮರುಗುವವೆ
ದೀಪವು ತಾನೇ ಉರಿದು
ಬೆಳಗಲು ಕಡುಕತ್ತಲೆಯ
ನೋವೆಂದು ನರಳುವವೆ

ಮನದ ನೋವುಗಳಿಗೆಲ್ಲ
ಇದೆ ಎದೆಯ ಸಾಂತ್ವಾನ
ಅನುಕ್ಷಣವು ನಮ್ಮೆದೆಯ ಬಡಿತದಲ್ಲಿ
ಅನುದಿನವು ನುಡಿಯುತ್ತಿಹ
ಉಸಿರಾಟವೇ ಬದುಕು
ಹೊಳೆಯಲಿ ಅದೆ ಎದೆಯ ಮಿಡಿತದಲ್ಲಿ

--------------------------------
."ಭಾವಕಣ"





No comments:

Post a Comment