Monday, 9 December 2013

ನಮ್ಮನ್ಹುಟ್ಸಿದ್ಯಾವ್ರು

ನಮ್ಮನ್ಹುಟ್ಸಿದ್ದ್ಯಾವ್ರೇ ನೀನು
ಎಲ್ಲಿಗ್ಹಾಳಾಗ್ಹೋದೆ
ನಮ್ಗೋಳು ಕೇಳಾದ್ಬುಟ್ಟು ಬೇರೆ
ಕೆಲ್ಸ ನಿಂಗೇನದೆ
ಇರೋರ್ಗೇನೆ ಎಲ್ಲಾ ಬಿಟ್ಟು
ಇಲ್ದೋರ್ಗೆಲ್ಲಾ ಕೈಯ ಕೊಟ್ಟು 
ಗುಡಿವಳ್ಗೆ ಆರಾಮಾಗಿ 
ಯಾಕೆ ಕುಂತ್ಕಂಬುಟ್ಟೆ 

ನಿಂಗೆ ನೂರಾರ್ ಹೆಸ್ರಿಟ್ಟವ್ರೆ
ದೊಡ್ದೊಡ್ಗುಡಿ ಕಟ್ಟಿ
ಹಾಲು ತುಪ್ದಲ್ತೊಳೀತವ್ರೆ 
ನಿನ್ನ ಮೈ ಕೈ ಮುಟ್ಟಿ
ಜಾತಿಗೊಂದು ದೇವ್ರ್ಮಾಡ್ಕಂಡು 
ದಿನಾ ಕಚ್ಚಾಡ್ತಾರೆ
ನಿನ್ನ ಹೆಸ್ರ್ಹೇಳ್ದುಡ್ಮಾಡ್ಕಂಡು
ಲೂಟಿ ಹೊಡೀತವ್ರೆ

ಉಂಡವ್ರೆಲೆಲ್ಹೊರ್ಳಾಡಿದ್ರೆ
ಪಾಪ ಕಳ್ದಂಗಂತೆ
ಭೂಮಿ ಬಗ್ದು ಕಿರಿಟ ಇಟ್ರೆ
ನೀನೊಲಿತಿಯಂತೆ
ಅವ್ಹೇಳ್ತಿದ್ಲು ಈ ನೆಲ್ದಲ್ಲಿ
ನೀನೊಡಾಡ್ತಿದ್ದಂತೆ
ಕಷ್ಠ ಹೇಳಕ್ಬಂದ್ರೆ ಯಾಕೆ
ಹಂಗೆ ಕದ್ಹೋಡ್ದಂತೆ?

ಕೇಳಿದ್ದೆಲ್ಲಾ ಕೊಡೂ ನಿಂಗೇ
ಕೊಡ್ತಾರ್ಚಿನ್ನದ್ಗಟ್ಟಿ
ಬಡವನ್ಮನೇಲನ್ನ ಇಲ್ಲ
ಹೊಟ್ಟೇಗ್ತಣ್ಣೀರ್ಬಟ್ಟಿ
ಧರ್ಮ ಗಿರ್ಮ ಅಂತ ಮಾಡ್ಕಂಡ್
ಕರ್ಮ ಮರ್ತವ್ರೆಲ್ಲಾ
ಇನ್ಹತ್ಸಾರಿ ಹುಟ್ಟೀದ್ರೂನು
ನಿನ್ಮರ್ಮ ತಿಳ್ಯಾಕಿಲ್ಲ

ನೀನೆ ಹೇಳು ನೀನ್ಮಾಡಿದ್ದು
ನಿಂಗೆ ಸರಿ ಐತ
ಬುದ್ಧಿ ಕೊಟ್ಟು ಸ್ವಾರ್ತದ್ಜೊತೆಗ್
ಆಸೆ ಕೊಡ್ಬೇಕಿತ್ತ
ಪಾಪ ತುಂಬ್ದಾಗ್ಬರ್ತೀಯಂತೆ
ಆಕಾಸ್ದಿಂದ ನೀನು
ಸಾಯಕ್ಮುಂಚೆ ನೋಡ್ಬೇಕ್ನಿನ್ನ 
ಕಾಯ್ತಾಯಿರ್ತೀನ್ನಾನು

ದ್ಯಾವ್ರೆ ನೀನು ಇರೋದಾದ್ರೆ 
ನಂದೊಂದ್ಮಾತು ಕೇಳು 
ಮನುಸ್ರೆಲ್ಲಾ ಒಂದೆ ಅಂತ 
ನೀನೆ ಬಂದು ಹೇಳು
ನೀನೆ ಮಾಡಿದ್ತಪ್ಪು ಇದು 
ನೀನೆ  ಸರಿ ಮಾಡು
ಇಲ್ಲ ಅಂದ್ರೆ ಹುಡಿಕ್ಯಂಬಂದು
ನ್ಯಾಯ ಕೇಳ್ತೀನ್ನೋಡು


"ಭಾವಕಣ"


Sunday, 8 December 2013

ನೀನಿಲ್ಲದ ನನ್ನೆದೆ


ನೀನಿಲ್ಲದ ಊರಿನಲಿ
ಕಡುಕತ್ತಲ ರಾತ್ರಿಯಲಿ
ನಿನ ಪ್ರೀತಿಯ ಹುಡುಕಿ ಹೊರಟೆ
ಮಿಣುಕು ಹುಳದ ಬೆಳಕಿನಲಿ

ನೀ ಬೇಡವೆಂದು ಎಸೆದ ಹೃದಯ
ನೀನಿಲ್ಲದೆ ಅದು ಬರೀ ಶೂನ್ಯ
ಇರುಳ ಮೂಲೆಯಲೆಲ್ಲೋ ನಿನಗಾಗಿ ನರಳುತಿದೆ
ಹೂಳಿಡುವ ನರಿಹಿಂಡು ಅದರ ಜಾಡು ಹಿಡಿಯುತಿದೆ

ಕೇಳಲಾರೆ ನನ್ನೆದೆಯ ನೋವಿನಾಕ್ರಂದನ
ಬೇತಾಳ ಮಾಡಿದೆ ಬಿಸಿನೆತ್ತರಿಗೆ ಆಕ್ರಮಣ
ಎದೆಬಿಡುತಿದೆ ಕೊನೆಯುಸಿರು ಶೈಯ್ಯೆಯ ಮೇಲೆ
ನೆನಪುಗಳು ಕಾತರಿಸಿವೆ ಇಡಲು ಬೆಂಕಿ ಜ್ವಾಲೆ

ಅಗೋ ಬೀಳುತಿದೆ ಎದೆ ಕೊರಳಿಗೆ ಯಮಪಾಶ
ಕೊಡದಿದ್ದರೆ ನಿನ್ನೆದೆಯಲಿ ಎನ ಪ್ರೀತಿಗೆ ಅವಕಾಶ
ನಿನ ಪ್ರೀತಿಯೇ ಸಂಜೀವಿನಿ ಕೊಡು ಎದೆಗೆ ಜೀವ
ನಿನ್ನಿಂದಲೇ ಉದಯಿಸಲಿ ಪ್ರೀತಿ ಬೆಳಕ ಕಾವ್ಯ


----------------------------------------
"ಭಾವಕಣ"

Saturday, 7 December 2013

ಕತ್ತಲೆ ಸ್ವಾತಂತ್ರ್ಯ

ಸ್ವಾತಂತ್ರ್ಯದ ಹಣತೆಯ ಬೆಳಕು
ಕುಣಿಕೆಯಲ್ಲಿ ನೆತಾಡುತ್ತಿದೆ ಕತ್ತಲೆಯಲಿ
ಬಿಕ್ಕುತ್ತಿದೆ ನಿಜ ಅಸ್ತಿತ್ವಕ್ಕಾಗಿ
ನಡು ರಾತ್ರಿಯಲಿ ಜನಿಸಿ ಬೆಳಕಿಗಾಗಿ

ಸ್ವಾತಂತ್ರ್ಯದ ಹಕ್ಕಿ ರೆಕ್ಕೆಬಡಿಯುತ್ತದೆ
ಪರಿತಪಿಸುತ್ತದೆ ಹಾರಲಾಗದೆ
ಅಧಿಕಾರದ ಜಡಶಿಲೆಯು ಹಿಡಿದಿದೆ ಕಾಲುಗಳ
ರೆಕ್ಕೆ ಬಡಿಯಲಷ್ಠೆ ಅವಕಾಶ
ನ್ಯಾಯದ ಸೂರ್ಯನೂ ಮರೆಯಾಗಿದ್ದಾನೆ
ಅನ್ಯಾಯದ ಕತ್ತಲ ಕಾಲು ಚಲಿಸುತ್ತದೆ
ಕಗ್ಗತ್ತಲ ರಾತ್ರಿಯಲಿ
ಎದುರು ನಿಂತವರ ಎದೆ ಸೀಳಲು
ಸಿಡಿದೆದ್ದವರ ಸೊಲ್ಲಡಗಿಸಲು
ಚಂದಿರನೂ ಬಲಿಯಾಗಿದ್ದಾನೆ ಇರುಳಿಗೆ
ನೆತ್ತರ ಜಲಪಾತ ನರಳಿ ಸುರಿಯುತ್ತದೆ
ಶತಮಾನದ ಕೊಳಕನ್ನು
ಕಡಲಾಳದಲ್ಲಿ ಅಡಗಿಸಲು

ಪ್ರಜಾಪ್ರಭುತ್ವದ ಕೊರಳ ಕಡಿದಿದ್ದಾರೆ
ಅಂದಿನಿಂದಲೂ ಆಳಿದವರು
ಪಿರಂಗಿಯ ಎದುರಿಸಿದ ಕ್ರಾಂತಿಯ ರಕ್ತ
ಇಂದಿಗೂ ಕೊರಗುತ್ತಿದೆ ಅನಾಥವಾಗಿ
ಸ್ವಾತಂತ್ರ್ಯ ವೀರರು ಸೀಮಿತವಾಗಿದ್ದಾರೆ
ಜನ್ಮಾಚರಣೆ ಪುಣ್ಯಸ್ಮರಣೆಗಳಿಗೆ
ರೋಗಗ್ರಸ್ತ ಆಢಳಿತದೊಳಗೆ

ಇತಿಹಾಸವು ಮರೆಯಾಗಿ ಅಳುತ್ತಿದೆ
ಸುಳ್ಳು ಬೋಧನೆಗೆ ನೊಂದು
ಬಚ್ಚಿಟ್ಟಿದ್ದಾರೆ ಅದರ ಪುಟಗಳ
ಹೊಳೆವ ಚಿನ್ನದ ಪಂಜರದಲ್ಲಿ
ಸಮಾಜದ ಕನ್ನಡಿ ಒಡೆದಿದೆ
ಜಾತಿಯ ನೂರು ಬಿಂಬಗಳ ನಡುವೆ
ವಿರಾಮವಿಲ್ಲದೆ ನಡೆಯುತ್ತವೆ ಧರ್ಮಯುಧ್ಧಗಳು
ಭಾರತಾಂಭೆಯ ನಡು ಎದೆಯ ಮೇಲೆ
ಭಯೋತ್ಪಾಧನೆಯ ವಿಷ ಬೀಜಗಳ ಬಿತ್ತಿ

ಸ್ವಾತಂತ್ರ್ಯದ ಹಕ್ಕಿ ಶಿಲೆಯಾಗುತ್ತದೆ
ಎಂದಿಗೂ ಸಾಯದೆ
ಬದುಕಲಾಗದೆ,ಹಾರಲಾಗದೆ
ರೆಕ್ಕೆ ಬಡಿಯಲಷ್ಠೇ ಅವಕಾಷ....


------------------------------------------
"ಭಾವಕಣ"