Sunday, 20 July 2014

"ಒಲವ ಸುಧೆ"

ಸುಮ್ಮನಿದ್ದ ಹೃದಯದ ನೆಲದಿ ಪ್ರೀತಿ ಮೊಳೆಸಿದ
ಮಾಯಗಾತಿ ನೀನು
ಕಣ್ಣ ಸಣ್ಣ ನೋಟಕೆ ಕಳೆದುಕೊಂಡ ಹೃದಯವ
ಹುಡುಕಿ ಸೋತೆ ನಾನು

ಕೆನ್ನೆ ಮದ್ದು ಕಿರುನಗೆ ಬಿಡದೆ ಸೂರೆಗೊಂಡಿದೆ
ಎದೆಯ ಪ್ರೀತಿ ನಿಧಿಯ
ಚಲನೆ ಮರೆತು ನಿಂತೆನು ಮೌನಿಯಾಗಿ ಹೋದೆನು
ಸವಿದೊಲವ ಸುಧೆಯ

ಯಾರೊ ಕಾಣೆ ಎದೆಯಲಿ ಇಟ್ಟಂತಿದೆ ಕಚಗುಳಿ
ನಗು ಸುಮ್ಮನೆ ಮೊಗದಲಿ
ನಿನ್ನದೊಂದು ಸನ್ನೆಗೆ ಎದೆಹಾಸುವೆ ಹೆಜ್ಜೆಗೆ
ಮಾತಿರದೀ ಜಗದಲಿ

ಕಣ್ಣು ಹಾಯಿಸಿದಷ್ಠೂ ನಿನ್ನ ರೂಪವೇ ಇತ್ತು
ಆಗಸದಲೂ ನಿನ ಬಿಂಬ
ಹೂಕಂಪಿಗೂ ಈಗ ವಾರೀಸುದಾರಿಕೆ ನಿನದೆ
ಸಿಹಿಜೇನು ಎದೆತುಂಬ

.............................................................
"ಭಾವಕಣ"

Friday, 30 May 2014

"ಭಾವ ಬಂಧನ"

ಎಲೆಯ ಮೇಲೆ ಹನಿಯ ಮಾಲೆ ಕೊರಳ ಮುತ್ತಿನಂತೆ
ಹೊಳೆಯುತಿವೆ ಸಾಲನುಟ್ಟು
ನಲ್ಲೆಗೆದೆಯ ಪಾತ್ರೆಯೊಳು ಬೇಯುತಿದೆ ಒಲವಿನೂಟ
ತುತ್ತುಕೊಡುವೆ ಮುತ್ತನಿಟ್ಟು

ಹೊಳೆವ ಅವಳ ಕಣ್ಣುಗಳು ಪ್ರೇಮ ಬಿಂಬ ಮೂಡಿಸಿ
ನನ್ನ ಚಿತ್ರ ಬಿಡಿಸಿದೆ
ಹೆಜ್ಜೆ-ಗೆಜ್ಜೆನಾದ ನುಡಿಸಿ ಒಲವು ಒಡಲನೆ ಮಿಡಿಸಿ
ಭಾವಗೀತೆ ಹಾಡಿದೆ

ಎಲ್ಲಾ ನಿನ್ನದೆ ಮಾಯೆ ನಿನಗೆಂದೋ ಶರಣಾದೆ
ಕಾಣೆ ಅರುಳೊ ಮರುಳೊ
ಏನೊಂದು ನಾನರಿಯೆ ಕನಸಲೂ ಕಾಡಿದೆ ಏಕೆ
ಇದು ಹಗಲೊ-ಇರುಳೊ

ಕಣ್ಣು ಕಟ್ಟಿದ ಕವನ ಪ್ರೀತಿಗೆ ಹಾಡಾಗುತಿದೆ
ಎದೆಬಡಿತ ಸಂಗೀತ
ಪ್ರೀತಿ ಹುಟ್ಟಿದ ಘಳಿಗೆ ಮನದಿ ಒಲವ ಸೋನೆ
ಹನಿಗನಿಯ ಸಂಗಾತ

ಭಾವಬಂಧನ ಎದೆಗೆ ನೀ ಬರದೆ ಬಿಡುಗಡೆಯೆ
ಒಲವು ತೊಡಿಸಿದೆ ಬೇಡಿ
ಅಂದ ಬಣ್ಣಿಸಿ ದಣಿದೆ ಚೆಂದ ಹೊಗಳಲುಬಹುದೆ
ಸೋತ ಚಂದಿರ ನೋಡಿ

----------------------------------------
"ಭಾವಕಣ"

"ನಾನಾಗಬೇಕಿದೆ......,

ನಾನಾಗಬೇಕಿದೆ ಜಗಬೆಳಗೊ ಸೂರ್ಯ
ಇರುವೆಲ್ಲಾ ಇರುಳನ್ನು ಇಡಿಯಾಗಿ ತೊಳೆದು
ಬರುವೆಲ್ಲಾ ಕಷ್ಠಗಳ ಬಿಡದಂತೆ ಬಳಿದು
ಮನುಕುಲದ ಮನದಲ್ಲಿ ಬೆಳಕಂತೆ ಹೊಳೆದು

ಸಿದ್ಧನಾಗಬೇಕಿದೆ ಸನ್ನದ್ಧನಾಗಬೇಕಿದೆ
ಅಪ್ರಭುದ್ಧತೆಯಿಂದ ಪ್ರಭುಧ್ಧನಾಗಬೇಕಿದೆ
ವೃದ್ಧಿಯಾಗಬೇಕಿದೆ ಸಮೃಧ್ಧಿಯಾಗಬೇಕಿದೆ
ಹಸಿದವರ ಹೊಟ್ಟೆಗೆ ಅನ್ನವೀಯಬೇಕಿದೆ

ಅರಿವಾಗಬೇಕಿದೆ ಹರಿವಾಗಬೇಕಿದೆ
ನೊಂದವರಿಗೆ ನೆರಳಾಗಬೇಕಿದೆ
ಗುರುವಾಗಬೇಕಿದೆ ಗುರಿಯಾಗಬೇಕಿದೆ
ನನ್ನವರ ಸಾಧನೆಗೆ ಹಾದಿಯಾಗಬೇಕಿದೆ

ಮಳೆಯಾಗಬೇಕಿದೆ ಬೆಳೆಯಾಗಬೇಕೀದೆ
ಭೂತಾಯಿ ಎಲ್ಲರಿಗೂ ಹಾಲೂಡಬೇಕಿದೆ
ಹೆಗಲಾಗಬೇಕಿದೆ ಹಗಲಾಗಬೇಕಿದೆ
ಈ ಜಗದ  ರಥಕೆ ನೊಗವಾಗಬೇಕಿದೆ

ನಗುವಾಗಬೇಕಿದೆ ಮಗುವಾಗಬೇಕಿದೆ
ಎಲ್ಲವೂ ಜೊತೆ ಜೊತೆಗೆ ಸಾಗಲೇಬೇಕಿದೆ
ಹಸಿರಾಗಬೇಕಿದೆ ಉಸಿರಾಗಬೇಕಿದೆ
ನೆಮ್ಮದಿಯ ನಾಳೆಗೆ ಹೆಸರಾಗಬೇಕಿದೆ

ಬುಧ್ದನಾಗಬೇಕಿದೆ ಬದ್ಧನಾಗಲೇಬೇಕಿದೆ
ಮಾನವತೆಯ ನವ ಧೂತನಾಗಬೇಕಿದೆ
ನಾನಾಗಬೇಕಿದೆ ಬದುಕು
ನಾನಾಗಬೇಕಿದೆ ಬೆಳಕು
ಆಗಬೇಕಿದೆ ಅನಂತ ಚೇತನ

----------------------------------
"ಭಾವಕಣ"

Friday, 11 April 2014

"ಮನ್ವಂತರ"

ಎಲೇ ಕೊಳಕು ಮನಸುಗಳೆ
ಇಂದಿಗೇ ಬಿಟ್ಟು ಬಿಡಿ
ನಿಮ್ಮೆಲ್ಲಾ ಹೊಲಸುಗಳ
ಅಂತರಂಗದಿ ನಾರುತ್ತಿದೆ
ಅಮಾನವತೆಯ ರಾಡಿ
ದ್ವೇಷಸೂಯೆಗಳೆಂಬ
ಹುಳುಕಿನೊಡಗೂಡಿ

ಮನಕೆ ಸಂಕೋಲೆಗಳ ಕಟ್ಟಿ
ಸಮಸಮಾಜವ ಬಂಧಿಸಿದವರೆ
ಅನಾಚಾರಗಳನ್ನೇ ಕೃತಿಯಾಗಿಸಿ
ಸುಸಂಸ್ಕೃತಿ ಎಂದವರೆ
ಸಾಕಿನ್ನು ನಿಲ್ಲಿಸಿ ಸ್ವಾರ್ಥದಡುಗೆಯ
ನೀವುಂಡು ನಮಗೀಯದಿರಿ
ಸಹಬಾಳ್ವೆಯ ಕೆಡಿಸದಿರಿ
ಒಗ್ಗಟ್ಟಿನೊಡಲಿಗೆ ವಿಷವೂಡದಿರಿ

ಗಟಗಟನೆ ರಕ್ತ ಹೀರುತ್ತಿದೆ
ಬೆನ್ನಿಗೆ ಹಾಕಿದ ಚೂರಿ
ನಂಬಿಕೆ ದ್ರೋಹಿಗಳೇ
ಗುಬ್ಬಿಯ ಮೇಲಲ್ಲವೇ ಬ್ರಹ್ಮಾಸ್ತ್ರ
ಒತ್ತೆಯಾಗಿಸಿದ್ದೀರಿ ಶಸ್ತ್ರಗಳ
ಮೇಲೆರಗಬಾರದೆಂದು
ತೊಡೆ ಮುರಿಯಬಾರದೆಂದು

ಇನ್ನೆಷ್ಠು ದಿನಗಳು ತಾನೆ ?
ಕತ್ತಲಿಳಿದು ಬೆಳಕರಿವತನಕ
ನೀವೇ ಬಿತ್ತಿದ ಅಸಮಾನತೆಯ
ವಿಷಬೀಜಗಳು ಬೆಳೆದು
ನಿಮಗೇ ಅನ್ನವಾಗುತ್ತವೆ
ಧರ್ಮ ಸಾಮ್ರಾಜ್ಯದ ಸುಳ್ಳು
ಸಿಂಹಾಸನಗಳು ತುಕ್ಕಾಗುತ್ತವೆ
ಜಾತಿಮತಪಂಥಗಳಳಿಯುತ್ತವೆ
ಕಾಲದ ಕಿಚ್ಚಿನುರಿಯಲಿ
ಹೊಸ ಮನ್ವಂತರಕೆ ನಾಂದಿಹಾಡುತ

---------------------------------------
"ಭಾವಕಣ"

Sunday, 6 April 2014

"ಮೌನ-ಮಂಥನ"

ಒತ್ತರಿಸಿ ಬಂದೆದೆಯ ಅಳುವ ನುಂಗಿ
ಪಧ್ಯ ಗೀಚುತಿಹೆ ಪದವ ಹೊಸೆದು
ನನ್ನ ಕವಿತೆಯನೋದಿ ನನ ಕಣ್ಣೆ ಹನಿಯುತಿವೆ
ಸನಿಹವಿಲ್ಲದ ನಿನ್ನ ನಗುವ ನೆನೆದು

ಒಡಲ ಪಿಸುಮಾತುಗಳ ಅರಿಯಲಾಗದ ನೀನು
ಮನದ ಮಾತು ಕೇಳಬಲ್ಲೆಯ
ಶಿಲೆಯೆದೆಯ ಮೌನ ಮಾತಾಗಿ ಹನಿಯಬೇಕು
ಕಾರ್ಮೋಡ ಚೆಲ್ಲೆ ಹನಿಯ

ನಿನ ನೆನಪು ಕಡೆಗೋಲು ಮಥಿಸುತಿದೆ ಎದೆಯ
ಇತಿಮಿತಿಯಿಲ್ಲದ ಪಥದಿ
ಕಂಪಿಸುತಿದೆ ಎದೆ ಸೋತು ತಂಪೆರೆಯದೀ ಪ್ರೀತಿಯಲಿ
ಹನಿ ಕಾಯ್ದ ನೆಲದ ತೆರದಿ

ಒಲೆಯ ಮೇಲಿನ ಮಡಕೆ  ತೆಗೆಯಬೇಡ ಬೇಗ
ಅನ್ನವಾಗಲಿ ಹಸಿವಿಗೆ
ಬೆಂಕಿಯೊಳಗಣ ಚಿನ್ನ ಕರಗಲಿ ಬಿಡು ಅದು
ಒಡವೆ ನಿನ್ನ ಮುದ್ದುಕಿವಿಗೆ

ಕಾಲಕಳೆದರೂ ಹೊಸತು ಹಳತಲ್ಲ ನಿನ್ನೊಲವು
ನವತನುವ ಚೆಲುವು
ನಲಿದ ಘಳಿಗೆಗಳನೆಲ್ಲ ಮರೆಯಲೊಲ್ಲದು ಮನವು
ನೀನಿರದೆಲೆ ಉಂಟೆ ಗೆಲುವು
------------------------------------------
"ಭಾವಕಣ"

"ಕತ್ತಿ-ಕಾಯಕ"

ಹಾಸುಗಲ್ಲಿನ ಮೇಲೆ ಹೊರಳುತ್ತಿದೆ ಕತ್ತಿ
ಬುಸುಗುಡುತ್ತಾ ಹಲ್ಲು ಮಸೆಯುತ್ತಾ
ಕುರಿಮಂದೆಗೆ ಗೊತ್ತೆ ಕೊರಳ ಬಗೆವರೆಂದು
ಮೇವನುಣುತ್ತದೆ ಮುದದಿ
ಜಗದ ಚಿಂತೆಯ ಮರೆತು
ಹಾಲನುಣಿಸುತ್ತದೆ ಮರಿಗೆ
ಎಲ್ಲರೊಳು ಬೆರೆತು

ಕಣ್ಣೆದುರೇ ಎಳೆದೊಯ್ದರೂ
ಎದೆಬಗೆಯಲು ತನ್ನವರ
ವಿರೋಧವಿಲ್ಲ ತಡೆಯುವುದಿಲ್ಲ
ತನ್ನದೇ ನೆತ್ತರು ಹರಿದರು
ಕೊರಳೊಡ್ಡುತ್ತದೆ ಯೋಗಿಯಂತೆ
ಕತ್ತಿ ರಕ್ಕಸನ ಬಾಯ್ಗೆ
ಕಡು ರುದಿರದಭಿಷೇಕ
ಕಟುಕ ಯಮನ ಕೈಗೆ

ಲೆಕ್ಕವಿರದಷ್ಠು ಜೀವನುಂಗಿದ ಕತ್ತಿ
ಅಳುಕಿಲ್ಲದೆ ನಿಲ್ಲುತ್ತದೆ ತಲೆಯೆತ್ತಿ
ಸ್ವರ್ಗಕ್ಕೋ ? ನರಕಕ್ಕೋ ?
ಜೀವಕಳಿಸಿದ ಪುಣ್ಯ ಅದಕೆ
ಕತ್ತಿಗೇನು ಕೋಪವೇ ?
ಕುರಿಯ ಕೊರಳ ಮೇಲೆ
ಕಟುಗವನ ಧರ್ಮ !
ತಿಂಬೊಗವನ ಧರ್ಮ !

ಮತ್ತದೇ ಕಾಯಕ ಕತ್ತಿಯದು
ಹಾಸುಗಲ್ಲಿನ ಮೇಲೆ ಹೊರಳಾಡಿ
ಹೊಳೆದು ಚೂಪಾಗಿ
ಮತ್ತೆ ಸಿದ್ಧವಾಗುತ್ತದೆ
ಕೊರಳ ಹರಿಯಲು
ಸ್ವರ್ಗಕ್ಕೋ ? ನರಕಕ್ಕೋ ? ಜೀವ !

-----------------------------------
"ಭಾವಕಣ"

Friday, 4 April 2014

"ಆತ್ಮಾವಲೋಕನ"

ಓ ಮನಸೇ ಸಹಿಸಿದ್ದು ಸಾಕಿನ್ನು
ಸರಿಸಿಬಿಡು ಮನದ ಕೊಳಕುಗಳ
ಶುದ್ಧಿಯಾಗಬೇಕಿದೆ ಅಂತರಂಗ
ಅರಿವಿನ ಮಳೆ ಸುರಿದು
ತೊಳೆಯಬೇಕಿದೆ ಕೊಳೆಯ
ಒಂದಷ್ಠೂ ಬಿಡದಂತೆ

ಬುದ್ದಿಯು ತಾನೇ ಆಳುತಿದೆ
ನಿನ್ನಂತರಾಳವ ಲಗಾಮು ಹಿಡಿದು
ಅಶುದ್ಧ ಆಲೋಚನೆಗಳು
ತೂರಿ ಬರುತ್ತವೆ ತಲೆಯೊಳಗೆ
ಬಹಿರಂಗವನ್ನಷ್ಠೇ ಹೊಳೆಸಿ
ಅಂತರಂಗದಿ ಹುಳುಕನುಳಿಸಿ

ನೀ ಬೇಡವೆಂದರೂ ಬುದ್ಧಿ ಬಿಡದು
ಜ್ಞಾನವನಳಿದು ಅಜ್ಞಾನವನಪ್ಪುತ್ತದೆ
ಕಂಡಿದ್ದೇ ಸತ್ಯವೆನ್ನುತ್ತದೆ
ಪ್ರಮಾಣಿಸುವ ನಿನ್ನ ಕಂಗಳ ಕಟ್ಟಿ
ತುಂಬಿದೆ ನಿನ್ನೊಳಗೆ ಕಲ್ಮಶಗಳ
ಲೋಭ ಮೋಹ ಕ್ರೋಧಸೂಯೆಗಳ
ತನ್ನಂತೆಯೇ ಬದಲಿಸ ಹೊರಟಿದೆ ನಿನ್ನನು
ಪ್ರೀತಿ ಸಂಬಂಧಗಳಿಗೆ ಬೆಲೆ ಕಟ್ಟುತ್ತದೆ
ಲೆಕ್ಕಾಚಾರದ ತಕ್ಕಡಿಯಲಿಟ್ಟು

ನೀನೆಷ್ಠು ಸಹಿಸುವೆ ನೋವುಗಳ
ಹೃದಯಾಘಾತವಾಗಬಹುದು
ಒಡೆದುಬಿಡು ತಡೆಯಬೇಡ
ಕಣ್ಣೀರ ಪ್ರವಾಹವೇ ಬರಬಹುದು
ಕ್ಷಮಿಸಿಬಿಡು ಮನವೇ
ನಿನಗೆ ನೋವನಿತ್ತ ನನ್ನನು
ತೊಡೆದುಬಿಡು ಕತ್ತಲೆಯ
ನಿನ್ನ ಕಿಡಿಯಿಂದ
ಬರಬೇಕಿದೆ ಬೆಳಕು
ಬದುಕಬೇಕಿದೆ ಬದುಕು

---------------------------------------
"ಭಾವಕಣ"

Sunday, 16 February 2014

"ಒಲವ ಮೋಡದಲ್ಲಿ"

ನನ್ನೂರ ಕಡೆಯಿಂದ
ನಿನ್ನೂರ ಕಡೆಗಿಂದು
ಹೊರಟ ಒಲವ ಮೋಡದಲ್ಲಿ
ಬರೆದಿಹೆನು ಪ್ರೀತಿ ಪದವ
ಬರಬಹುದು ಇನ್ನೇನು
ತಂಗಾಳಿಯ ಜೊತೆಯಲ್ಲಿ
ಕಾಯುತಿರು ಅಲ್ಲಿ ನೀನು
ನನ್ನೊಲವು ಬರುವಲ್ಲಿ

ಗುಡುಗು ಮಿಂಚಿನೊಡ್ಡೋಲಗ
ಪ್ರೀತಿ ಮಳೆಗೆ ಇಂದು 
ಬರುವ ಹಾದಿ ಹೂಗಳೆಲ್ಲ
ನಲಿಯಲಿವೆ ಮಳೆಗೆ ಮಿಂದು
ಎದೆ ನದಿಯು ತುಂಬಲಿದೆ
ಒಲವ ಕಡಲ ಸೇರಲಿದೆ
ನಿನ್ನ ನಗುವ ನೋಡಲು
ನನ್ನೊಡಲು ಹಸಿದಿದೆ

ಅಗೋ! ಮೇಘವು ಸುರಿಸಿತು
ನನ್ನ ಪ್ರೀತಿ ಪದದ ಮಳೆಯ
ಹನಿಯಾಗಿ ಹನಿಯಾಗಿ
ನನ್ನೊಲವ ಧನಿಯಾಗಿ
ಮೇಲಿಂದ ಧರೆಗಿಳಿದು
ತಾಕುತಿವೆ ನಿನ ಕಂಗಳ
ಬಿಟ್ಟೂ ಬಿಡದೆ ಹಟಹಿಡಿದು

ಸಮ್ಮತಿ ಬೇಡಿದೆ ಪ್ರೀತಿ
ನಿನ್ನೆದುರಲಿ ಮಂಡಿಯೂರಿ
ಬರಡಾದ ನನ್ನೆದೆಗೆ
ಚೆಲ್ಲಿಬಿಡು ಒಲವ ಹನಿ
ಚಿಗುರಲಿ ನನ್ನೆದೆಯಲಿ
ಒಲವ ಹಸಿರು ನಿನ್ನಿಂದಲೆ
ಉಸಿರಿಗುಸಿರು ನಿನ್ನಿಂದಲೆ

------------------------
"ಭಾವಕಣ"

Tuesday, 4 February 2014

"ನಿನ್ನೊಡಲಲಿ"

ನಿನ್ನ ಕಾಣದೆದೆಯು
ಗುಡುಗುತ್ತದೆ ಗುಡುಗಂತೆ
ಸಿಡಿಯುತ್ತದೆ ಸಿಡಿಲಂತೆ
ಬಿರುಗಾಳಿ ಮಳೆಸುರಿಸಿ
ಕಡಲುಬ್ಬಿ ಬಂದಂತೆ
ಹೂ ಕಂಪು ಉಸಿರಿರದೆ
ಬಿಸಿಲಲ್ಲಿ ಉರಿದಂತೆ

ಚಂದಿರನು ಚಿತೆಯೇರಿ
ತಾರೆಗಳು ಅಸುನೀಗಿ
ಕತ್ತಲೆಯೇ ಎದೆನಭವ
ಆಳುತಿದೆ ನೆನಪಾಗಿ
ಕಣ್ಣಹನಿ ಹೊರಬರದೆ
ಕರಗುತಿದೆ ಕಣ್ಣೊಳಗೆ
ಉಸಿರೇ ಉಸಿರಾಟ ಮರೆತು
ರೋದಿಸಿದೆ ಎದೆಯೊಳಗೆ

ನೀ ಎದುರಲಿ ನಿಂತರೆ
ನಿಲಬಹುದು ತೊಳಲಾಟ
ಈ ಮನಸಿನ ಹೊಯ್ದಾಟ
ನಸುನಗುತಾ ನಿಂತುಬಿಡು
ಕದಲದೇ ನೀ ಸುಮ್ಮನೆ
ಎದೆಹಟವ ಬಿಡಬಹುದು
ನಿನ್ನ ಮುದ್ದು ಮುಖ ಕಂಡು
ಬಿಗಿದಪ್ಪಿಬಿಡು ಒಮ್ಮೆ
ಸಾವಿರ ಜನ್ಮವ ಕಳೆವೆ
ನಗು ನಗುತ ನಿನ್ನೊಡಲಲಿ

-------------------------
"ಭಾವಕಣ"

Monday, 6 January 2014

"ಬೆವರು-ಕಾರುಬಾರು"

ಇರೋನ್ಮನೇಲುರಿತಾವೆ
ಸೂರ್ಯನ್ನಾಚ್ಸೊ ಬೆಳ್ಕು
ಇಲ್ದೋನ್ಮನೆ ಗುಡಿಸ್ಲಲ್ಲಿ
ಎಣ್ಣೆ ದೀಪದ್ಮಿಣ್ಕು
ಬರ ಬಂದ್ರು ಮಳೆ ಹೋದ್ರು
ಸಿಕ್ತೈತಿವ್ರ್ಗೆ ಕೂಳು
ಬರಡು ನೆಲದಲ್ಬಡವನ್ಬೆವ್ರು
ಕೇಳೋರಿಲ್ಲ ಗೋಳು

ಚಳಿಗೆ ಮಳೆಗೆ ಕುಣ್ಯಾಕೈತೆ
ಪಬ್ಬು ಕ್ಲಬ್ಬು ಬಾರು
ಒಳ್ಗೆ ಬಿಸಿ ಆಗ್ತಾ ಐತೆ
ವಿದೇಸಿ ಪಿಜ್ಜಾ ಬರ್ಗರು
ಬಂತು ನೋಡು ಕೋಟಿ ಕಾರು
ಹಾರಿಸ್ಕಂಡು ರಸ್ತೆ ನೀರು
ಬಿಗ್ ಬಜಾರು ಪಿವಿಆರು
ಕುಡಿದವರ ಕಾರುಬಾರು

ತಿಂದಿದ್ನೆಲ್ಲ ಅರುಗ್ಸಕೆ
ಓಡ್ತಾ ಅವ್ನೆ ಧನಿಕ
ಅವ್ನ ಮೈಮ್ಯಾಲ್ಹೊಳೀತೈತೆ
ಬಾರಿ ದುಬಾರಿ ಕನಕ
ಹಸ್ದ ಹೊಟ್ಟೆ ಮುಂದಿಟ್ಕಂಡು
ದುಡಿತಾವ್ನೆ ಬಡ್ವ
ತೀರ್ಸಕಂತ ಅವ್ನಿಂದ
ಪಡ್ದ ಬಡ್ಡಿ ಸಾಲ್ವ

ಭಾವ ಭಾಸೆ ಒಂದೂ ಇಲ್ಲ
ಇಂಗ್ಲೀಸ್ ಟಸ್ಸು ಪುಸ್ಸು
ವಿದ್ಯೆನೆಲ್ಲ ಮಾರ್ಕಂಡವ್ರೆ
ಸಿಕ್ತೈತೆ ಕೊಟ್ರೆ ಕಾಸು
ಹತ್ತತ್ತಲ್ಮಾರ್ತಿನ್ನೋವಷ್ಠು
ದುಡ್ಬೇಕಿವ್ರೀಗ್ಯಾಕೆ
ಬ್ಯವ್ರಿನ್ದುಡ್ಮೆ ಬಡ್ವನ್ನುಡಿಗೆ
ಬ್ಯಾರೆ ಆಸೆ ಬೇಕೆ?

ಸಿರಿವಂತ್ರೆ ಸಿರಿತನ್ವು
ಹಣ್ದಾಗೆಂದು ಇಲ್ಲ
ತಕ್ಕೊಂಡ್ಹೋಗಾದೇನೈತಿಲ್ಲಿ
ಮಾನವತ್ಯೇ ಎಲ್ಲ
ಅವ್ನ ಬ್ಯವ್ರೆ ನಮ್ಗೆ ಅನ್ನ
ನೆನ್ಪಲ್ಲಿರ್ಲೊ ಅಣ್ಣ
ಸಮಾನತ್ಯೆ ನಮ್ಗಳ್ದರ್ಮ
ಆಗ್ಬುಟ್ರೆಸ್ಠು ಚೆನ್ನ

--------------------

"ಭಾವಕಣ"

"ಅವಳ ಮಾತು ಹೂನಗೆ"

ನಾನೆ ಜೀವ ನೀನೆ ಭಾವ
ಪ್ರೀತಿ ನಮ್ಮ ದೈವ
ಮಿಡಿವ ಎದೆಗೆ ನಿನದೆ ಹೆಸರ
ಪದವೆ ನಮ್ಮ ಕಾವ್ಯ

ಮಳೆಯ ಹನಿಗೆ ಇಳೆಯ ಬೆಸುಗೆ
ನದಿಗೆ ಕಡಲ ಧ್ಯಾನ
ಮಾಮರದಲಿ ಕೋಗಿಲೆಯ
ನವ ಚೈತ್ರದ ಗಾನ

ರವಿಗೆ ಕಮಲ ಶಶಿಗೆ ತಾರೆ
ಹೂವ ಜೇನು ದುಂಬಿಗೆ
ನನ್ನೆದೆಯ ಮೌನಗಳಿಗೆ
ಮಾತು ನಿನ್ನ ಹೂನಗೆ

----------------------

"ಭಾವಕಣ"

Sunday, 5 January 2014

"ಆಶಾಭಾವ"

ಭೂನೆಲದ ಒಡಲಿಂದ
ಬಂಧ ಕಳೆದಿದೆ ಹಳೆಮರ
ತನ್ನೊಡಲ ಬೇರಿಂದ
ಬೆಳೆಸಿ ಹೊಸ ಚಿಗುರ
ಮರದ ಎಲೆಮರೆ ಹಣ್ಣು
ನೆಲದೊಡಲ ಸೇರಲು
ಗರ್ಭ ಧರಿಸಿದೆ ಮಣ್ಣು
ಜೀವದುಸಿರನೆ ಹೆರಲು

ತನ್ನ ಜೀವಿತವ ಕಳೆದು
ನೆಲಕಿಳಿದ ಒಣ ಎಲೆಯು
ಕಣ್ಣಹನಿ ಮಿಡಿವುದೆ ಎಂದಾದರು
ತನ್ನ ಹಡೆದ ತಾಯ್ಮಡಿಲಲಿ ಕರಗಿ
ಬರುವ ನವ ಚಿಗುರನು
ಮರೆವುದೆ ಮುಂದಾದರು

ಮೋಡ ಕರಗಲು ಸುರಿವ
ಮಳೆಹನಿ ಬಿಕ್ಕುವುದೆ
ಮಡಿಲ ತೊರೆದೆನೆಂದು
ನೆಲಕಿಳಿದು ಹರಿಯುವುದು
ಸಂತಸದಿ ನದಿಯಾಗಿ
ಕಡಲ ಸೇರುವೆನೆಂದು

ರವಿಕಿರಣಗಳಿಗೆ ಹೊಳೆದು
ಅರಳಿ ನಗುವ ಹೂವುಗಳು
ಬಿಸಿಲೆಂದು ಮರುಗುವವೆ
ದೀಪವು ತಾನೇ ಉರಿದು
ಬೆಳಗಲು ಕಡುಕತ್ತಲೆಯ
ನೋವೆಂದು ನರಳುವವೆ

ಮನದ ನೋವುಗಳಿಗೆಲ್ಲ
ಇದೆ ಎದೆಯ ಸಾಂತ್ವಾನ
ಅನುಕ್ಷಣವು ನಮ್ಮೆದೆಯ ಬಡಿತದಲ್ಲಿ
ಅನುದಿನವು ನುಡಿಯುತ್ತಿಹ
ಉಸಿರಾಟವೇ ಬದುಕು
ಹೊಳೆಯಲಿ ಅದೆ ಎದೆಯ ಮಿಡಿತದಲ್ಲಿ

--------------------------------
."ಭಾವಕಣ"





"ಬಿಸಿಲ ಕೋಲು"

ಬಿಸಿಲ ಕೋಲ ಬೆಳಕೆಂದು ತಿಳಿದೆ
ಮನಕೆ ಕವಿದ ಇರುಳಲಿ
ಹಿಡಿಯಲಾರೆ ಕೈಗೆ ಸಿಗದು
ಎದೆಯ ಸೂರಿನಡಿಯಲಿ

ಬಾಳ ರವಿಯು ಮೂಡನೇಕೊ
ಮುನಿಸು ತೋರಿ ಹೊರಟನೊ
ಶಶಿಯ ಬೆಳಕ ಸುಳಿವೇ ಇಲ್ಲ
ಏಕೆ ಮೌನ ತಳೆದನೊ?

ವಿಷವುಂಡಿದೆ ಜೇನಹನಿ
ಸಿಹಿಯ ಸಾವಿನಲ್ಲಿ
ಕಡಲುಸಿರು ನಿಲ್ಲುತಿದೆ
ಅಲೆಯ ಮಿಡಿತವೆಲ್ಲಿ?

ಸ್ವರಗಳೊಡಲು ಸಿಡಿಯುತಿದೆ
ತಂತಿ ಹರಿದ ವೀಣೆ
ಪ್ರೀತಿ ಕವನ ಕರಗುತಿದೆ
ಮನದಿ ಮುದುಡಿ ಮೆಲ್ಲನೆ

----------------------
"ಭಾವಕಣ"

Saturday, 4 January 2014

"ಮುಂಗಾರು"

ಮಳೆಯೊಂದೆ ಹನಿನೂರು
ಜಗಜಾತ್ರೆಗೆ ಭುವಿತೇರು
ನಸುನಗುತಲಿ ಮುಂಗಾರು
ನಲಿಸಿದೆ ಎದೆ ಪ್ರೀತಿಯೂರು

ಮೊದಲ ಮಳೆಯ ಹಾಡಿಗಿಲ್ಲಿ
ಗುಡುಗು ಮಿಂಚು ಮೇಳವಲ್ಲಿ
ಘಮ್ಮೆನುತಿರೆ ಭುವಿಯೊಡಲು
ನದಿ ಸೇರಿದೆ ಪ್ರೀತಿ ಕಡಲು

ಸುರಿವ ಸೋನೆ ಹಾಡಿಗೆ
ಹಸಿರ ಜನನ ಕಾಡಿಗೆ
ಝರಿ ಚೆಲ್ಲಿವೆ ಹಾಲನೊರೆ
ಪ್ರಕೃತಿಯು ಹಸಿರು ನೀರೆ

ಮಳೆ ಚೆನ್ನ,ಹೊಳೆ ಚೆನ್ನ
ಬೆಳೆ ಅನ್ನ,ಇಳೆ ಚಿನ್ನ
ಮುಂಗಾರಿನೊಡಲಿನೊಳು
ಮಿಂದೇಳಲು ನೆಲ-ಮನ


-------------------------------
"ಭಾವಕಣ"




Friday, 3 January 2014

"ಹೊಸ ವರುಷ"

ಎಲ್ಲರಿಗೂ,ಎಲ್ಲದಕೂ ಬೇಕು
ಹೊಸತನ ಹೊಸ ಸಂವತ್ಸರ
ಹಳೆದಿನವ ಮರೆಯಲು
ಹೊಸತನವ ಮೆರೆಸಲು
ಇದೊಂದು ಸವಿವೇದಿಕೆ
ಎಲ್ಲವೂ ಬಯಸಿದೆ
ಹೊಸತನದ ಹೊದಿಕೆ

ಮರದ ಹಣ್ಣೆಲೆಯುದುರಿ
ನೆಲದಿ ಕರಗಿ
ಹಳೆಬಸಿರಲಿ ಹೊಸಚಿಗುರಿನ
ಮಿಂಚು ಮಿನುಗಿ
ಬಿರು ಬಿಸಿಲಲು ವಸಂತನ
ಕೋಗಿಲೆಗಾನ
ಹೊಸ ಋತುವಲಿ ಭೂರಮೆಗೆ
ಇಬ್ಬನಿ ಸ್ನಾನ

ಮುಂಗಾರಿಗೆ ವೇದಿಕೆಯಿದು
ಮೊದಲ ಮಳೆಯ ಹಾಡಿಗೆ
ಒಣ ಬೀಜಕೂ  ಮೊಳಕೆ ಭಾಗ್ಯ
ವಿಸ್ಮಯ ಪ್ರಕೃತಿ ಕೊಡುಗೆ
ಭುವಿಯೆಲ್ಲವೂ ಹಸಿರುಟ್ಟಿದೆ
ಮಧು ಮಗಳಿಗೆ ಸಿಂಗಾರ
ಉದಯಿಪ ರವಿಕಿರಣಗಳು
ಬೀರಿವೆ ಬೆಳಕ ಬಂಗಾರ

ವರುಷ ಕಳೆದರೂ ವರುಷ
ಬಂದಿದೆ ಹೊಸವರುಷ
ಹಸಿರುಸಿರಲಿ ಮನೆಮನದಲಿ
ತಂದಿದೆ ನವ ಹರುಷ
ಕಳೆದವುಗಳು ಕಹಿನೆನಪು
ಮರೆಯಾಗಲಿ ನೋವು
ಎಳೆಮನದಲಿ ಹಳೆನೆಲದಲಿ
ಅರಳಲಿ ನಗು-ಹೂವು

--------------------------
"ಭಾವಕಣ"