Friday, 4 April 2014

"ಆತ್ಮಾವಲೋಕನ"

ಓ ಮನಸೇ ಸಹಿಸಿದ್ದು ಸಾಕಿನ್ನು
ಸರಿಸಿಬಿಡು ಮನದ ಕೊಳಕುಗಳ
ಶುದ್ಧಿಯಾಗಬೇಕಿದೆ ಅಂತರಂಗ
ಅರಿವಿನ ಮಳೆ ಸುರಿದು
ತೊಳೆಯಬೇಕಿದೆ ಕೊಳೆಯ
ಒಂದಷ್ಠೂ ಬಿಡದಂತೆ

ಬುದ್ದಿಯು ತಾನೇ ಆಳುತಿದೆ
ನಿನ್ನಂತರಾಳವ ಲಗಾಮು ಹಿಡಿದು
ಅಶುದ್ಧ ಆಲೋಚನೆಗಳು
ತೂರಿ ಬರುತ್ತವೆ ತಲೆಯೊಳಗೆ
ಬಹಿರಂಗವನ್ನಷ್ಠೇ ಹೊಳೆಸಿ
ಅಂತರಂಗದಿ ಹುಳುಕನುಳಿಸಿ

ನೀ ಬೇಡವೆಂದರೂ ಬುದ್ಧಿ ಬಿಡದು
ಜ್ಞಾನವನಳಿದು ಅಜ್ಞಾನವನಪ್ಪುತ್ತದೆ
ಕಂಡಿದ್ದೇ ಸತ್ಯವೆನ್ನುತ್ತದೆ
ಪ್ರಮಾಣಿಸುವ ನಿನ್ನ ಕಂಗಳ ಕಟ್ಟಿ
ತುಂಬಿದೆ ನಿನ್ನೊಳಗೆ ಕಲ್ಮಶಗಳ
ಲೋಭ ಮೋಹ ಕ್ರೋಧಸೂಯೆಗಳ
ತನ್ನಂತೆಯೇ ಬದಲಿಸ ಹೊರಟಿದೆ ನಿನ್ನನು
ಪ್ರೀತಿ ಸಂಬಂಧಗಳಿಗೆ ಬೆಲೆ ಕಟ್ಟುತ್ತದೆ
ಲೆಕ್ಕಾಚಾರದ ತಕ್ಕಡಿಯಲಿಟ್ಟು

ನೀನೆಷ್ಠು ಸಹಿಸುವೆ ನೋವುಗಳ
ಹೃದಯಾಘಾತವಾಗಬಹುದು
ಒಡೆದುಬಿಡು ತಡೆಯಬೇಡ
ಕಣ್ಣೀರ ಪ್ರವಾಹವೇ ಬರಬಹುದು
ಕ್ಷಮಿಸಿಬಿಡು ಮನವೇ
ನಿನಗೆ ನೋವನಿತ್ತ ನನ್ನನು
ತೊಡೆದುಬಿಡು ಕತ್ತಲೆಯ
ನಿನ್ನ ಕಿಡಿಯಿಂದ
ಬರಬೇಕಿದೆ ಬೆಳಕು
ಬದುಕಬೇಕಿದೆ ಬದುಕು

---------------------------------------
"ಭಾವಕಣ"

No comments:

Post a Comment