Wednesday, 29 August 2018

"ನನ್ನಮ್ಮ"

ಹೊಟ್ಟೆಯಲಿ ಒದ್ದಾಗ ನೋವುಂಡು ನಕ್ಕವಳು
ಹಟ್ಟಿಯಲಿ ಬಿದ್ದಾಗ ನನ ಕೂಡಿ ಅತ್ತವಳು
ನವಮಾಸ ಹೊತ್ತವಳು
ಕಡಲಾಳದ ಮುತ್ತಿವಳು
ಬದುಕಿವಳು ಬೆಳಕಿವಳು
ಹಾಲೂಡಿದ ಹಡೆದವಳು

ಹರಿದ ಸಿರೆಗಳನುಟ್ಟೇ ಸಿರಿಯ ಕಂಡವಳು
ನಮಗುಣಿಸಿ ತಾನುಣದೆ ಮುಗುಳುನಕ್ಕವಳು
ಬರೆದೋದಲು ಬರದೆಯೂ
ಬದುಕು ಕಲಿಸಿದಳು
ಒಡಲಿವಳು ಮಡಿಲಿವಳು
ನನ್ನೆದೆಯ ಧನಿಯಿವಳು

ಕಡುಕಷ್ಠ ಬಡತನಕೆ ಎದೆಗುಂದದವಳು
ಬಿಸಿಲು ಮಳೆ ಲೆಕ್ಕಿಸದೇ ಕೂಲಿ ಮಾಡಿದವಳು
ಎದೆ ನೆತ್ತರು ಬಸಿದು ನಮ್ಮ
ಎದೆಯೆತ್ತರ ಬೆಳೆಸಿದವಳು
ನನ್ನವಳು ಕಣ್ಣಿವಳು
ಗುರಿ ತೋರಿದ ಗುರು ಇವಳು

ಸೋಲುಗಳನೇ ಗೆಲುವಾಗಿಸಿ ನೋವು ಮರೆಸಿದಳು
ಎದುರು ನಕ್ಕು ಒಳಗೆ ಬಿಕ್ಕಿ ನೊಂದು ಬೆಂದವಳು
ಬರಿಗಾಲಲೇ ತಾನು ನಡೆದು
ನಮ್ಮ ಹೆಗಲಲೊತ್ತವಳು
ನಗು ಇವಳು ಮಗುವೆ ಇವಳು
ನನ್ನಾತ್ಮವೇ ಆಗಿಹಳು ನನ್ನಮ್ಮ

Wednesday, 22 August 2018

"ಕಾಲ"

                      ೧
ನಾನಂತೂ ಎಲ್ಲಾ ಕಾಲದಲ್ಲಿಯೂ ಇದ್ದೇನೆ!
ಯಾವ ಕಾಲವೆಂದು ಕಾಲೆಳೆಯಬೇಡಿ.
ಬೇಸಿಗೆ ಚಳಿ ಮಳೆಗಾಲವಲ್ಲ
ಅಂದಿಗೊಂದಿ ಸಂದಿಕಾಲವಲ್ಲ
                      ೨
ಆಗತಾನೆ ಭುವಿ ಹುಟ್ಟಿ ಅಂಬೆಗಾಲಿಡುತ್ತಾ
ತಲೆಕೆಟ್ಟು ತಿರುಗುತ್ತಿತ್ತು, ಇತ್ತಾ?
ಇತ್ತು!ನೀರಿಲ್ಲದೆ ಬಾಯಾರಿ ಬಳಲಿ
ಯಾರಿದ್ದರು ನೀರುಣಿಸಲು ಹೇಳಿ?
ನಾನು ತಾನೆ !
ಒಡಲೊಳಂತು ಜ್ವಾಲಾಮುಖಿ,ಭೂಕಂಪನ
ಬಿರುಗಾಳಿ,ಕೆಂದೂಳಿನ ಆರ್ಭಟನ
ಬುಡಮೇಲು ಮಾಡುತ್ತಿದ್ದವು ಪೈಪೋಟಿಗೆ ಬಿದ್ದವರಂತೆ
ಉಳಿದೆಲ್ಲವೂ ಮೂಕ ಪ್ರೇಕ್ಷಕರಂತೆ
                         ೩
ನಾನು ಹೇಗೆ ಸುಮ್ಮನಿರಲಿ?ಸುಮ್ಮನಿರಲಿಲ್ಲ!
ನಾನೆ ಭುವಿಯ ಮಡಿಲಲಿ ಮಲಗಿಸಿ
ನಾನೇ ಭುವಿಗೆ ಎದೆ ಹಾಲುಣಿಸಿ,ಸಂತೈಸಿ
ಸಮಾಧಾನಿಸಿ,ಮುದ್ದಿಸಿ,ಶಾಂತಗೊಳಿಸಿ
ನೀಲಿಯಾಗಸದ ಮೇಲೆ ಮೋಡಗಳ ಸೃಷ್ಠಿಸಿ
ಮಿಂಚಿಸಿ,ಗುಡುಗಿಸಿ,ಹಿಂಡಿ
ಮಳೆಯಾಗಿಸಿ,ತಂಪಾಗಿಸಿ...
ಅಬ್ಭಾ! ಆಗಲೇ ತಾನೆ ಹಸಿರುಟ್ಟಿದ್ದು
ಭುವಿ ತಾಯಿ ಮಳೆ ತಂದೆ ಆದದ್ದು
ಮುಂದೆ...
                    ೪
ಸುರಿದ ಮಳೆ ಹನಿಗಳನು
ನದಿಯಾಗಿ ಹರಿಸಿದೆ ಜಲವನ್ನು
ಭುವಿಯುದರದೊಳು ತುಂಬಿದೆ,ಅಂತರ್ಜಲ!
ನಾನೇ ನೆಲ ಅಗೆದು ಬೆಟ್ಟ ಗುಡ್ಡಗಳ ಮಾಡಿ
ಅದೇ ಹಳ್ಳಗಳ ಸಾಗರವಾಗಿಸಿದೆ ನೋಡಿ
ನಾನೇ ನೀರನು ಬೆಟ್ಟಗಳಿಂ ಧುಮುಕಿಸಿ
ಝರಿ-ತೊರೆಗಳದರ ಮೇಲಿಂದ ಹರಿಸಿ
ಮೊದಲು ನಾನೇ ಮಿಂದೆ
ನಾನೇ ಮಳೆಬಿದ್ದ ನೆಲಕೆ ಬೀಜಗಳ ಹರಡಿ
ಗಿಡ ಮರ ಕಾಡುಗಳ ಬೆಳೆಸಿ,ಹಸಿರಾಗಿಸಿದೆ
ಉಸಿರಾಡಿಸಿದೆ
ಕಾಮನ ಬಿಲ್ಲನು ಎದೆಯೇರಿಸಿ
ಬಣ್ಣಗಳ ತೀಡಿದೆ
                             ೫
ಬೆಳಕಿರದ ಭೂಮಿ,ಯಾರು ಹಚ್ಚುವರು ದೀಪ?
ಅದು ನಾನೇ ತಾನೆ!
ಅದೆಲ್ಲೋ ಬಿಕಾರಿಗಳಂತೆ ಅಲೆಯುತ್ತಿದ್ದ
ಸೂರ್ಯ ಚಂದ್ರರ ಹುಡುಕಿ
ಹಗಲಿರುಳು ಪಾಳಿಗಿಟ್ಟವನೂ ನಾನೆ
ಎಣಿಸಲಾಗದ ನಕ್ಷತ್ರಗಳನೆಣಿಸಿ
ಒಂದೊಂದನೇ ಆಗಸದಲಿ ಜೋಡಿಸಿ
ಚುಕ್ಕಿ ಜೋಕಾಲಿಗಳ ಕಟ್ಟಿದವನುನಾನೆ
ಅದರೊಳು ಭುವಿಯಿಟ್ಟು ತೂಗಿದವನೂ ನಾನೆ
                         ೬
ನೀರಿನಲಿ ಜಲಚರಗಳ ಬಿಟ್ಟು
ಈಜಲು ಕಲಿಸಿದವ ನಾನೆ
ಜೊತೆಗೆ ಈಜಿದವನು ನಾನೆ
ಸಖಲ ಮೃಗಖಗಗಳನು ಸೃಷ್ಠಿಸಿ ನಲಿದಾಡಿದವ ನಾನೆ
ಹಕ್ಕಿಗಳಿಗೆ ರೆಕ್ಕೆಗಳನು ಕಟ್ಟಿ
ನಾನೇ ಹಾರುವುದ ಕಲಿಸಿ
ಮುಗಿಲೆತ್ತರದಲಿ ಹಾರಿಸಿ,ನಾನೂ ಹಾರಿದೆ
ಹಕ್ಕಿ ಗೂಡಲಿ ಮಲಗಿ ಹಕ್ಕಿ ಹಾಡನು ಗುನುಗಿ
ಮೊಟ್ಟೆಯೊಡೆದು ತುತ್ತು ತಿಂದವನೂ ನಾನೆ
ಮರಗಿಡದಿ ಹೂ ಹಣ್ಣು ಇಟ್ಟವನೂ ನಾನೆ
ಸವಿಜೇನನು ಮೊದಲು ಉಂಡವ ನಾನೆ
ಬೆತ್ತಲೆ ಭುವಿಗೆ ಹಸಿರು ಸೀರೆಯುಡಿಸಿ
ಜೀವ ಜಂತುಗಳ ಚಲಿಸಿ
ನಾನೇ ಉಸಿರಾಗಿಸಿದೆ,ನಾನೂ ಉಸಿರಾಡಿದೆ
ತಿಳಿನೀರನು ಹೆಪ್ಪಾಗಿಸಿ
ಹಿಮಖಂಡಗಳಿಗೆ ಬಿಳಿಯ ಬಣ್ಣ ಬಳಿದೆ
ಎಲ್ಲಕೂ ನಾನೇ ಮೊದಲು ಹತ್ತಿ ಇಳಿದೆ
                        ೭
ಮೊದಲು ನಾನೇ ನರಮಾನವನ ಹುಟ್ಟು ಕಂಡವನು
ಅರಿವಿರದ ಬೆತ್ತಲೆಗೆ ಅರಿವೆಯುಡಿಸಿ
ನಾನೆ ಅರಿವಾದವನು
ಗುಡಿಸಲು ಕಟ್ಟಿ ದೀಪ ಬೆಳಗಿದವನು
ಉಳುವ ನೆಲವಾಗಿ,ನೆಲಕೆ ನೇಗಿಲಾಗಿ
ಬಿತ್ತುವ ಬೆಳೆಯಾಗಿ,ಬೆಳೆಯ
ಮೊಳಕೆಯಾಗಿಸಿ,ಬೆಳೆಸಿ,ಬೇಯಿಸಿ
ನಾನೇ ತುತ್ತಿಟ್ಟವನು
ಹೆಣ್ಣು ಗಂಡಿನಲಿ ಭುವಿ ಮಳೆಯಷ್ಠೇ
ಪವಿತ್ರ ಪ್ರೀತಿಯ ಹುಟ್ಟಿಸಿದವನು
ಪ್ರೀತಿಯೇ ಆದವನು
                            ೮
ನಾನಂತೂ ಎಲ್ಲಾ ಕಾಲದಲ್ಲೂ ಇದ್ದವನು
ಈಗ ಇದ್ದು ಮುಂದೆಯೂ ಇರುವವನು
ಎಲ್ಲಾ ಕಾಲದಲ್ಲೂ ಇರುವ ಕಾಲ ನಾನು



Tuesday, 14 August 2018

"ಬಿಡಿಸದನುಬಂಧ"

ಈಗಷ್ಠೇ ಕತ್ತಲು ಸಂಜೆಯ ಕೊರಳು ಹಿಸುಕಿ
ಕತ್ತಲೆಯಲ್ಲೇ ಮರೆಯಾಯ್ತು!
ಚಂದಿರನೇ ಬೆಳದಿಂಗಳ ನುಂಗಿದ
ನಿನ್ನ ಬೇಸರ ನನಗೆ ಹೀಗೇ ನೋಡು
ಸ್ವರದರಿವಿರದ ಕೋಗಿಲೆಯ ಹಾಡು
ನಿನ್ನ ದುಂಡು ಮುಖದಲ್ಲಿ ನಾನು
ಸದಾ ನಗುವನ್ನೇ ಕಂಡಿದ್ದೇನೆ
ಇಂದು ನಿನ್ನಳುವನ್ನರಗಿಸಿಕೊಳ್ಳದ ಹೃದಯ
ವಾಡಿಕೆಗಿಂತ ಹೆಚ್ಚೇ ಬಡಿಯುತ್ತಿದೆ
ನೀನಂತೂ ಮೌನವಾಗಿದ್ದೀಯ
ಈಗ ಅದೇ ನನ್ನೆದೆ ಸುಡುವ ಕಿಡಿಯಾಗಿದೆ


ಈಗಷ್ಠೇ ಬಿರುಗಾಳಿಯು ತಂಗಾಳಿಯ ಎದೆಬಗೆದು
ಆಲಬ್ಬರಿಸುತ್ತಾ ಮರೆಯಾಯ್ತು
ನಿನ್ನ ನಿಶ್ಚಲ ನೋಟವು ನನ್ನೆದೆಯಲ್ಲಿ
ಎಬ್ಬಿಸಿದ ಕೋಲಾಹಲವೂ ಹೀಗೆ
ಕಡಲೇ ಅಲೆಗಳ ನುಂಗಿದ ಹಾಗೆ
ನನ್ನ ಪ್ರತಿ ಮಾತಿಗೂ ಕಿವಿಯಾಗುತ್ತಿದ್ದ ನೀನು
ನನ್ನೆಡೆಗೆ ಬೆನ್ನು ತಿರುಗಿಸಿದ್ದೀಯ
ನಿನ್ನ ಚೆಲುವನ್ನು ಮುನಿಸು ನುಂಗುತಿದೆ
ನನ್ನೆಡೆಗೆ ತಿರುಗು,ಎದೆಗೆ ಒರಗು
ನೀನಂತೂ ನನಗೆ ಪ್ರೀತಿಯೇ ಆಗಿರುವೆ
ಅದೇ ನಮ್ಮಿಬ್ಬರ ಬಂಧಿಸಿದ ಬಂಧವಾಗಿದೆ
ಬಿಡಿಸದನುಬಂಧವಾಗಿದೆ

-------------------------------------------------------------------
                          "ಭಾವಕಣ"

" ಪ್ರತ್ಯೇಕ ರಾಜ್ಯ "

ನಿಮಗೆಲ್ಲಾ ಬೇಕು ತಾನೆ ಪ್ರತ್ಯೇಕ ರಾಜ್ಯ?
ಅಂದು ಒಂದಾಗಿಸಲು ಒಂದಾಗಿದ್ದಿರಿ
ಇಂದು ಹೋಳಾಗಿಸಲು ಒಂದಾಗಿದ್ದೀರಿ
ಬನ್ನಿ!ಹರಿತವಾದ ಆಯುಧಗಳನ್ನೇ ತನ್ನಿ
ಕನ್ನಡದ ಕದಂಬ ವೃಕ್ಷವು
ಸಾವಿರಾರು ವರುಷಗಳಷ್ಠು ಹಳೆಯದು
ರಾಜರು,ಸಂತರು,ಕಲಿಗಳು,ಕವಿಗಳು
ಕನ್ನಡಿಗರು ಬಿತ್ತಿದ ಬೆಳೆಯಿದು
ತುಂಡರಿಸಿ ರೆಂಬೆ-ಕೊಂಬೆಗಳ
ಎರಡಾಗಿಸಿ ಒಂದು ಮನಸುಗಳ
ಇಬ್ಭಾಗವಾಗಲಿ ಕನ್ನಡ

ಕದಂಬರ ಕನಸುಗಳನು
ಕಾರ್ಗತ್ತಲೆಯೊಳು ಸರಿಸಿ
ಹೊಯ್ಸಳರ ಶಿಲ್ಪಗಳ ನುಚ್ಚುನೂರಾಗಿಸಿ
ರಾಷ್ಠ್ರಕೂಟರ ಕೂಟವನು
ದೂಳೀಪಟ ಮಾಡಿಬಿಡಿ
ಚಾಲುಕ್ಯರ ಚೈತನ್ಯವ
ಸೆರೆಮನೆಯೊಳು ನೂಕಿಬಿಡಿ
ಗಂಗರ ಹಂಗದು ಏಕೆ ?
ವಿಜಯನಗರದ್ವೈಭವವೇಕೆ?
ಒಡೆಯರ ನುಡಿಗುಡಿಯ
ಮೈಸೂರಿನ ಮಮತೆಯೇಕೆ?
ಚಿತೆಗೇರಿಸಿ ಕನ್ನಡದ ಚೈತನ್ಯಗಳ
ಗಲ್ಲಿಗೇರಿಸಿ ಕನ್ನಡದ ಕಟ್ಟಾಳುಗಳ

ಒಡೆದುಬಿಡಿ ಕನ್ನಡವ ಉತ್ತರ ದಕ್ಷಿಣವೆಂದು
ತುಂಡುಮಾಡಿ ಚೆಲ್ಲಿಬಿಡಿ ಕನ್ನಡದಖಂಡವನು
ಹೋಳಾಗಲಿ ಭುವನೇಶ್ವರಿಯ
ಕನ್ನಡ ಸಿರಿಗುಡಿಯು
ಮಣ್ಣಾಗಲಿ ನಮ್ಹೆಮ್ಮೆಯ ಸವಿಗನ್ನಡ ನುಡಿಯು
ಕಡಿದುಬಿಡಿ ಕನ್ನಡಮ್ಮನೆದೆಗಳ
ನಿಮಗೊಂದು ನಮಗೊಂದು
ಆಗಿಬಿಡಲಿ ಅವಳೀಗ ದೇಹವೊಂದು ಉಸಿರೊಂದು

ನಿಮಗೆಲ್ಲಾ ಬೇಕು ತಾನೆ ಪ್ರತ್ಯೇಕ ರಾಜ್ಯ ???
ಬನ್ನಿ!ಹರಿತವಾದ ಆಯುಧಗಳನ್ನೇ ತನ್ನಿ...


-------------------------------------------------------------------
                    "ಭಾವಕಣ"