Friday, 11 April 2014

"ಮನ್ವಂತರ"

ಎಲೇ ಕೊಳಕು ಮನಸುಗಳೆ
ಇಂದಿಗೇ ಬಿಟ್ಟು ಬಿಡಿ
ನಿಮ್ಮೆಲ್ಲಾ ಹೊಲಸುಗಳ
ಅಂತರಂಗದಿ ನಾರುತ್ತಿದೆ
ಅಮಾನವತೆಯ ರಾಡಿ
ದ್ವೇಷಸೂಯೆಗಳೆಂಬ
ಹುಳುಕಿನೊಡಗೂಡಿ

ಮನಕೆ ಸಂಕೋಲೆಗಳ ಕಟ್ಟಿ
ಸಮಸಮಾಜವ ಬಂಧಿಸಿದವರೆ
ಅನಾಚಾರಗಳನ್ನೇ ಕೃತಿಯಾಗಿಸಿ
ಸುಸಂಸ್ಕೃತಿ ಎಂದವರೆ
ಸಾಕಿನ್ನು ನಿಲ್ಲಿಸಿ ಸ್ವಾರ್ಥದಡುಗೆಯ
ನೀವುಂಡು ನಮಗೀಯದಿರಿ
ಸಹಬಾಳ್ವೆಯ ಕೆಡಿಸದಿರಿ
ಒಗ್ಗಟ್ಟಿನೊಡಲಿಗೆ ವಿಷವೂಡದಿರಿ

ಗಟಗಟನೆ ರಕ್ತ ಹೀರುತ್ತಿದೆ
ಬೆನ್ನಿಗೆ ಹಾಕಿದ ಚೂರಿ
ನಂಬಿಕೆ ದ್ರೋಹಿಗಳೇ
ಗುಬ್ಬಿಯ ಮೇಲಲ್ಲವೇ ಬ್ರಹ್ಮಾಸ್ತ್ರ
ಒತ್ತೆಯಾಗಿಸಿದ್ದೀರಿ ಶಸ್ತ್ರಗಳ
ಮೇಲೆರಗಬಾರದೆಂದು
ತೊಡೆ ಮುರಿಯಬಾರದೆಂದು

ಇನ್ನೆಷ್ಠು ದಿನಗಳು ತಾನೆ ?
ಕತ್ತಲಿಳಿದು ಬೆಳಕರಿವತನಕ
ನೀವೇ ಬಿತ್ತಿದ ಅಸಮಾನತೆಯ
ವಿಷಬೀಜಗಳು ಬೆಳೆದು
ನಿಮಗೇ ಅನ್ನವಾಗುತ್ತವೆ
ಧರ್ಮ ಸಾಮ್ರಾಜ್ಯದ ಸುಳ್ಳು
ಸಿಂಹಾಸನಗಳು ತುಕ್ಕಾಗುತ್ತವೆ
ಜಾತಿಮತಪಂಥಗಳಳಿಯುತ್ತವೆ
ಕಾಲದ ಕಿಚ್ಚಿನುರಿಯಲಿ
ಹೊಸ ಮನ್ವಂತರಕೆ ನಾಂದಿಹಾಡುತ

---------------------------------------
"ಭಾವಕಣ"

1 comment: